by 1 on | 2024-07-09 08:53:58
Share: Facebook | Twitter | Whatsapp | Linkedin | Visits: 303
ಅಪರಾಧಗಳಿಗೆ ಕಡಿವಾಣ ಅಗತ್ಯ ಆಕ್ರೋಶದಿಂದಲೇ ವ್ಯವಸ್ಥೆ ಸರಿಯಾಗದು.
ಕರ್ನಾಟಕ ಸಮೃದ್ಧ, ಶಾಂತಿ ನೆಮ್ಮದಿಯ ನಾಡು ಎನ್ನುವ ಮೆಚ್ಚುಗೆಯ ಮಾತು ಈಗ ಬಳಸಲು ಗಂಟಲು ಹಿಡಿಯುತ್ತದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಯ ರಾಜ್ಯದಲ್ಲಿ ಈಗೀಗ ಅಪರಾಧ ಪ್ರಕರಣಗಳ ಪ್ರತಾಪವೂ ಹೆಚ್ಚಿದೆ. ಇದೇ ಕಾರಣಕ್ಕೆ ಪೊಲೀಸ್ ವರಿಷ್ಠರನ್ನು ಕೂರಿಸಿಕೊಂಡು ರಾಜ್ಯದ ಮುಖ್ಯಮಂತ್ರಿಗಳು ಪಾಠ ಮಾಡಿದ್ದು ಸುದ್ದಿಯಾಯಿತು. ಅಪರಾಧ ಪ್ರಕರಣಗಳ ಅಬ್ಬರ ಮಿತಿಮೀರಿದೆ. ಜನರ ನೆಮ್ಮದಿ ಹಾಳಾಗುತ್ತಿದೆ. ಹದ್ದುಬಸ್ತಿನ ಕೆಲಸ ಚುರುಕುಗೊಳಿಸಿ ಎಂದು ಅಧಿಕಾರಿಗಳನ್ನು ಎಚ್ಚರಿಸಿರುವುದು ಸಕಾರಣವಾಗಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಟಿಸಿದ ಮಾಹಿತಿ ಪ್ರಕಾರ, ಕಳೆದ ಸಾಲಿನಲ್ಲಿ 2 ಲಕ್ಷ ಸಮೀಪದ ಅಪರಾಧ ಪ್ರಕರಣಗಳು ರಾಜ್ಯದಲ್ಲಿ ಘಟಿಸಿವೆ. ಇದರಲ್ಲಿ ಸುಮಾರು 600 ಅತ್ಯಾಚಾರ, 67 ಮಾನವ ಕಳ್ಳಸಾಗಣೆ, 1,482 ಕೊಲೆ ನಡೆದು ಹೋಗಿವೆ. ದೂರದ ಗಡಿ ರಾಜ್ಯ ಪಂಜಾಬಿನಲ್ಲಿ ಕೇಳಿಸುತ್ತಿದ್ದ ಡ್ರಗ್ಸ್ ಅಪಾಯದ ಕರೆಗಂಟೆ ಈಗ ಬೆಂಗಳೂರಿನ ನಿದ್ದೆಗೆಡಿಸಿದೆ. ಗಲ್ಲಿಗಳಲ್ಲಿ ಯಾರ ಭಯವೂ ಇಲ್ಲದೆ ಡ್ರಗ್ಸ್ ಮಾರಾಟವಾಗುತ್ತಿದೆ. ಇದನ್ನೇ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ರೌಡಿಗಳು, ಕಾಳಸಂತೆಕೋರರು, ಡ್ರಗ್ಸ್ ಮಾಫಿಯಾ ತಲೆ ಎತ್ತಿ ನಡೆಯುವಾಗ ನೀವೇನು ಮಾಡುತ್ತಿದ್ದೀರಿ ಎಂದು ಪೊಲೀಸ್ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ. ಇದು ಸರಕಾರ-ಅಧಿಕಾರಿಗಳ ನಡುವಿನ ಕಾಟಾಚಾರದ ಪ್ರಶೋತ್ತರ ಪ್ರವರ ಎಂದು ಲಘುವಾಗಿ ಪರಿಗಣಿಸಿ ಸುಮ್ಮನಾಗಲು ಸಾಧ್ಯವಾಗದು.
ಹುಬ್ಬಳ್ಳಿಯಲ್ಲಿ ಹಾಡಹಗಲೇ ನಡೆದ ವಿದ್ಯಾರ್ಥಿನಿಯರಿಬ್ಬರ ಬರ್ಬರ ಹತ್ಯೆ, ಬೆಳಗಾವಿಯಲ್ಲಿ ಘಟಿಸಿದ ಮಹಿಳೆ ಬೆತ್ತಲೆ ಪ್ರಕರಣ, ಜೈನ ಮುನಿ ಹತ್ಯೆ, ರಾಜಧಾನಿಯಲ್ಲಿ ಸ್ಟಾರ್ ನಟನ ಗ್ಯಾಂಗ್ನಿಂದ ನಡೆದ ಅಪಹರಣ ಹಾಗೂ ಹತ್ಯೆಯಂತಹ ಘಟನೆಗಳು ರಾಜ್ಯದ ಕಾನೂನು ಸುವ್ಯವಸ್ಥೆಗೆ ಕನ್ನಡಿ ಹಿಡಿಯುತ್ತವೆ.
ಆರ್ಥಿಕ ಅಪರಾಧಗಳು, ಮಕ್ಕಳ ಮೇಲಿನ ದೌರ್ಜನ್ಯಗಳು ಕೂಡ ಅಪಾಯದ ಮಟ್ಟಕ್ಕೆ ಎತ್ತರಿಸಿವೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ದಬ್ಬಾಳಿಕೆಯಲ್ಲೂ ರಾಜ್ಯಕ್ಕೆ ಕೆಟ್ಟ ಹೆಸರು ಅಂಟಿಕೊಂಡಿದೆ. ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ದೇಶದಲ್ಲೇ ಮೂರನೇ ಸ್ಥಾನ ರಾಜ್ಯಕ್ಕೆ ಇದೆ. ಇದೆಲ್ಲವನ್ನೂ ಸರಕಾರ ಪರೋಕ್ಷವಾಗಿ ಒಪ್ಪಿಕೊಂಡಿರುವುದು ಮುಖ್ಯಮಂತ್ರಿಗಳ ಆಕ್ರೋಶದಿಂದ ಖಚಿತವಾಗುತ್ತದೆ. ಆದರೆ ಬರೀ ಬಾಯಿ ಮಾತು, ಗದರಿಕೆ ಮಾತ್ರದಿಂದಲೇ ಈಗಿನ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲ. ಕಾರ್ಯಸಾಧು ಎನಿಸುವ ನೀತಿಗಳನ್ನು ಸರಕಾರ ಮೊದಲು ಜಾರಿಗೊಳಿಸಬೇಕಿದೆ. ಮುಖ್ಯವಾಗಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಇರುವ ಹಸ್ತಕ್ಷೇಪವನ್ನು ನಿಲ್ಲಿಸಬೇಕಿದೆ. ಹೆಚ್ಚು ದಕ್ಷರೆನಿಸುವ ಅಧಿಕಾರಿಗಳನ್ನು ಅಪರಾಧಗಳ ಎಪಿಸೆಂಟರ್ಗಳಲ್ಲಿ ನಿಯುಕ್ತಿಗೊಳಿಸಬೇಕು. ಜನರ ನೆಮ್ಮದಿ ಕಾಯುವ ಪ್ರಾಮಾಣಿಕ ಕಾಳಜಿ ಸರಕಾರಕ್ಕಿದ್ದರೆ ಎಲ್ಲವೂ ಸರಿ ಹೋಗುತ್ತದೆ ಎನ್ನುವುದರಲ್ಲಿ ಸಂಶಯ ಬೇಕಿಲ್ಲ.
ಕ್ರೈಂ ಥ್ರಿಲ್ಲರ್ “ಕಲುಷ” ಟೀಸರ್ ಬಿಡುಗಡೆ ಇದೇ ಮಾರ್ಚ್ 23
ಕಲುಷ ಕನ್ನಡ ಚಲನಚಿತ್ರ
ಪಿಜಿ ವಿಭಾಗದಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಮಖಂಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂಭ್ರಮ
ಸ್ವಚ್ಛತೆಯೇ ಆರೋಗ್ಯಕ್ಕೆ ಅಡಿಪಾಯ: ಸುನಿಲ್ ರಾಟೋಡ್
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಯಿತು
ಶಿಕ್ಷಕನಿಗೆ ಬಹುಮುಖದ ವ್ಯಕ್ತಿತ್ವ ಇರಬೇಕು
ಪ್ರಶಿಕ್ಷಣಾರ್ಥಿಗಳ ಕಾರ್ಯಗಾರ ಕಾರ್ಯಕ್ರಮ